ಸಮಕಾಲೀನ ಸಾಂಸ್ಕೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳುವ ಹಂಬಲದಿಂದ ಹುಟ್ಟಕೊಂಡಿದ್ದು ನಿರ್ದಿಗಂತ. ಬಹುಮುಖಿ ಪ್ರಜ್ಞೆಯ ಸಮಾನ ಮನಸ್ಕರು ತೊಡಗಿಕೊಂಡಿರುವ ಈ ಸಂಘಟನೆಯು ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ ರೂಪಕ ವಾಗಿ ಬರುವ ‘ನಿರ್ದಿಗಂತ’ ಎಂಬ ಕಲ್ಪನೆಯನ್ನು ತನ್ನ ಕಾರ್ಯ ವಿಧಾನವಾಗಿಸಿಕೊಂಡಿದೆ. ರಂಗಭೂಮಿಯ ಪ್ರಧಾನ ನೆಲೆಯಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಶಿಲ್ಪವೇ ಮೊದಲಾದ ಲಲಿತ ಕಲೆಗಳನ್ನು ಒಳಗೊಂಡು ಕಾಲದ ಕರೆಗೆ ಕಂಪಿನ ಕರೆಯನ್ನು ಜೋಡಿಸುವ ಪ್ರಯತ್ನದಲ್ಲಿದೆ. ಇಲ್ಲಿ ಕಲಾವಿರದು. ಸಾಹಿತಿಗಳು, ವಿಜ್ಞಾನಿಗಳು, ಪರಿಸರ ತಜ್ಞರು ಪರಸ್ಪರ ಸಾವಯವ ಸಂಬಂಧಿಗಳಾಗಿ ಇರುತ್ತಾರೆ.
ಈ ಬದುಕು ಆರಂಭವಾಗಿ ಒಂದು ವರ್ಷವಾಯಿತು. ರಂಗಭೂಮಿಯ ಕಲಾವಿದರಿಗೆ ಕಾವುಗೂಡಾಗಿ ಮೈದಳೆಯುತ್ತ ಹಲವು ಪ್ರಯೋಗಗಳನ್ನು ನಡೆಸುತ್ತ ಸಮಾಜದೊಳಗೆ ಸೂಕ್ತ ಮಧ್ಯಪ್ರವೇಶಿಕೆ ಪಡೆಯುತ್ತ ನಿರ್ದಿಗಂತವು ಸಾಗುತ್ತಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನ ತಲುಪುವ ಉದ್ದೇಶದ ಕಾಲೇಜು ರಂಗ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಠಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿ ‘ಶಾಲಾರಂಗ’ ಹಾಗು ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗಶಿಕ್ಷಕರನ್ನು ತೊಡಗಿಸಿರುವ ‘ಶಾಲಾ ರಂಗವಿಕಾಸ’, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ‘ರಂಗವಿಕಾಸ’ ಯೋಜನೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ. ‘ನೇಹದ ನೈಗೆ’ ಎಂಬ ಬಹು ಮಹತ್ವದ ಎರಡು ರಂಗೋತ್ಸವಗಳನ್ನು ಸಂಘಟಿಸಿದೆ. ಇಲ್ಲಿಯ ಪರಿಸರಕ್ಕೆ ನಾಡಿನ, ಹೊರ ನಾಡಿನ. ಅಂತೆಯೇ ವಿವಿಧ ದೇಶಗಳ ಕಲಾ ಪ್ರತಿನಿಧಿಗಳು ಬಂದಿದ್ದಾರಲ್ಲದೆ, ಹೊಸ ರಂಗಭಾಷೆಯ ಹುಡುಕಾಟದ ತಾಲೀಮನ್ನೂ ನಡೆಸಿದ್ದಾರೆ. ನೃತ್ಯ, ಸಂಗೀತವೇ ಮೊದಲಾದ ಕಾರ್ಯಾಗಾರಗಳೂ ಇಲ್ಲಿ ನಡೆದಿವೆ. ಇಲ್ಲಿ ಸೀಮೆಗಳಿಲ್ಲ, ಗಡಿಯ ಅಡ್ಡಿಗಳಿಲ್ಲ, ಸೋಲುವ ಭಯವಿಲ್ಲ, ಪದಾಧಿಕಾರಿಗಳಲ್ಲ, ಒಟ್ಟಂದದಲ್ಲಿ ಕೆಲಸ ಮಾಡುವ, ಸೊಗಸಿಗೆ ರೂಪಕದಂತೆ ಬಾಳುವ ಕನಸಷ್ಟೇ ಇರುವುದು.
ಈ ಎಲ್ಲ ಬಗೆಯ ಚಟುವಟಿಕೆಗಳಲ್ಲಿ ಕೆಲವನ್ನು ಆಯ್ದು ನಿಮ್ಮ ಮುಂದಿಡುತ್ತಿದ್ದೇವೆ. ಇದು ನಿರ್ದಿಗಂತದ ಒಂದು ವರ್ಷದ ‘ನಡೆ’. ಈ ವಾರ್ಷಿಕ ಸಂಚಿಕೆಯಲ್ಲಿರುವ ಒಂದು ವರ್ಷದ ಪಯಣವನ್ನು ನೋಡುತ್ತ ನಮ್ಮೊಂದಿಗೆ ಜತೆಯಾಗಿ, ಅಷ್ಟು ಸಾಕು.
ಅನುಷ್ ಶೆಟ್ಟಿ 15 ವರ್ಷಗಳ ಕಾಲ ಮೈಸೂರಿನಲ್ಲಿ ಮೃದಂಗ ವಾದನವನ್ನು ಕಲಿತಿದ್ದು, ಹಲವು ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದಾರೆ. ರಂಗ ಸಂಗೀತದಲ್ಲಿ ದಶಕದಿಂದ ತೊಡಗಿಸಿಕೊಂಡಿದ್ದು, 30ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 'ನಾವು', 'ರಿದಂ ಅಡ್ಡ' ಬ್ಯಾಂಡ್ ಗಳ ಮೂಲಕ ಸಂಗೀತದ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಯುವ ಬರಹಗಾರರೂ ಆಗಿರುವ ಇವರು ಈವರೆಗೂ ಐದು ಕಾದಂಬರಿಗಳನ್ನು ರಚಿಸಿದ್ದು, ಅವುಗಳಲ್ಲಿ ಎರಡು ಕಾದಂಬರಿಗಳು ಸಿನೆಮಾ ಆಗಿವೆ.
ಸಂಗೀತ ನಿರ್ದೇಶಕರಾಗುವ ಕನಸು ಹೊತ್ತ ಸುಂದರೇಶ್ ದೇವಪ್ರಿಯಂ ಕಳೆದ 20 ವರ್ಷ ಗಳಿಂದಲೂ ಗಿಟಾರ್ ಜೊತೆ ಒಡನಾಡಿದ್ದಾರೆ. ವಿಶ್ವವಿದ್ಯಾಲಯಗಳ ದಕ್ಷಿಣ ವಲಯ ಸ್ಪರ್ಧೆಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಪ್ರತಿನಿಧಿಸುವಾಗ ಜೊತೆಯಾದ ವಿವಿಧ ಸಂಗೀತ ಪರಿಕರ ನುಡಿಸುವ ಸ್ನೇಹಿತರೊಂದಿಗೆ 'ನಾವು' ಎಂಬ ಬ್ಯಾಂಡ್ ಕಟ್ಟದರು. ಸಂಗಾತಿ ಶೃತಿ ರಂಜನಿ ಅವರೊಂದಿಗೆ 'ಸೋಲ್' ಸಂಗೀತ ಶಾಲೆಯನ್ನೂ ನಡೆಸುತ್ತಿರುವ ಅವರು, ರಂಗ ಹಾಗು ಸಿನಿಮಾ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಕಳೆದ 25 ವರ್ಷಗಳಿಂದ ರಂಗಭೂಮಿಯ ಜೊತೆ ಒಡನಾಡಿರುವ ಶಾಲೋಮ್ ಸನ್ನುತಾ ನಟಿಯಾಗಿ, ಹಾಡುಗಾರ್ತಿಯಾಗಿ, ರಂಗ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 'ನಾವು' ಬ್ಯಾಂಡ್ ನಲ್ಲಿ ಹಾಡುಗಾರ್ತಿಯಾಗಿರುವ ಇವರು, ಮ್ಯಾಂಡನ್, ಗಿಟಾರ್ ನುಡಿಸಬಲ್ಲರು. ಶಾಸ್ತ್ರೀಯ, ಪಾಶ್ಚಾತ್ಯ, ಜಾನಪದ ಶೈಲಿಯ ಗಾಯನದಲ್ಲಿ ಕಾಲೇಜು ದಿನಗಳಿಂದಲೂ ತೊಡಗಿಸಿಕೊಂಡಿದ್ದಾರೆ. ರಂಗಸಂಗೀತವನ್ನೇ ಮುಖ್ಯವಾಗಿಸಿಕೊಂಡು ಸಂಗೀತ ನಾಟಕಗಳ ಪ್ರಯೋಗಗಳಿಗೆ ತೆರೆದುಕೊಂಡಿದ್ದಾರೆ.
ನಟ, ನಿರ್ದೇಶಕ ಮತ್ತು 'ಸ್ಪಿನ್ನಿಂಗ್ ಶ್ರೀ ಥಿಯೇಟರ್ ಕಂಪನಿಯ ಸಂಸ್ಥಾಪಕರು. ನಟರು ಮತ್ತು ನೃತ್ಯಗಾರರ ಅನುಕೂಲಕ್ಕಾಗಿ ಸಾಂಪ್ರದಾಯಿಕ ಮತ್ತು ಸಮಕಾಲೀನ ರಂಗಭೂಮಿ ತಂತ್ರಗಳ ತರಬೇತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನೀನಾಸಂ ನಂತರ, ಅವರು ಸಿಂಗಾಪುರದ ಇಂಟರ್ ಕಲ್ಬರಲ್ ಥಿಯೇಟರ್ ಇನ್ಸ್ಟಿಟ್ಯೂಟ್(ಐಟಿಐ) ನಲ್ಲಿ ಹಲವಾರು ಸಾಂಪ್ರದಾಯಿಕ ಏಷ್ಯನ್ ಥಿಯೇಟರ್ ತಂತ್ರಗಳಲ್ಲಿ ಮೂರು ವರ್ಷಗಳ ತರಬೇತಿಯನ್ನು ಪಡೆದರು. ಇತ್ತೀಚೆಗೆ ಅವರು ಯುಕೆಯ ಕೆಂಟ್ ವಿಶ್ವವಿದ್ಯಾಲಯದಿಂದ ಥಿಯೇಟರ್ ಮೇಕಿಂಗ್ನಲ್ಲಿ ಸ್ನಾತಕೋತ್ತರ ಪದವಿಪಡೆದಿದ್ದಾರೆ.
ರಂಗಭೂಮಿ, ಅದರಲ್ಲಿಯೂ ಮಕ್ಕಳ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಕೇರಳ ಮೂಲದ ಅರುಣ್ ಲಾಲ್, ಅಟಲ್ ಅರ್ತ್ ಸ್ಕೂಲ್ ನ ನಿರ್ದೇಶಕರಾಗಿದ್ದಾರೆ. ಅವರ ನಟನೆಯ ಮತ್ತು ನಿರ್ದೇಶನದ ನಾಟಕಗಳು ದೇಶವಿದೇಶಗಳಲ್ಲಿ ಪ್ರದರ್ಶನಗೊಂಡಿವೆ. ಅಲ್ಲದೆ ನಿರ್ದೇಶನ ಮತ್ತು ನೃತ್ಯ ಸಂಯೋಜನೆಗಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ಸೇರಿವೆ.
ಹುಟ್ಟೂರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮ. ಚಿತ್ರಕಲೆಯಲ್ಲಿ ಡಿ.ಎಂ.ಸಿ. ಕೋರ್ಸ್ ಮಾಡಿದ ನಂತರ ಶಿಲ್ಪಕಲೆಯ ಅಭ್ಯಾಸದಲ್ಲಿ ತೊಡಗಿಕೊಂಡು ಕಲ್ಲು ಮತ್ತು ಮರದ ಕೆತ್ತನೆಯಲ್ಲಿ ಪರಿಣತಿ ಪಡೆದರು. ಸಾಂಪ್ರದಾಯಿಕ ಮೂರ್ತಿ ಕೆತ್ತನೆ, ಮಣ್ಣು, ಫೈಬರ್, ಲೋಹ ಮೊದಲಾದ ಮಾಧ್ಯಮಗಳಲ್ಲಿ ಶಿಲ್ಪರಚನೆ ಇವರ ಆಸಕ್ತಿಯ ಕ್ಷೇತ್ರ. ರಂಗಭೂಮಿಯ ನೇಪಥ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರು ರಂಗಸಜ್ಜಿಕೆ ಹಾಗೂ ಪರಿಕರ ನಿರ್ಮಾಣದಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡಿದ್ದಾರೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಸುಶ್ಮಿತಾ ಗ್ರಾಫಿಕ್ ವಿಭಾಗದಲ್ಲಿ ಬಿ. ಎಫ್. ಎ ಪದವಿಯನ್ನು ಮೈಸೂರಿನ ಕಾವಾ ಕಾಲೇಜಿನಲ್ಲಿ ಪಡೆದಿದ್ದಾರೆ. ಪದವಿಯ ನಂತರ ಖಾಸಗಿ ಕಂಪನಿಗಳಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಸ್ವತಂತ್ರೋದ್ಯೋಗಿಯಾಗಿ ಬ್ರಾಂಡಿಂಗ್, ಐಕಾನ್ ಡಿಸೈನಿಂಗ್, ವೆಬೈಟ್ ಡಿಸೈನಿಂಗ್ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಹರಳಹಳ್ಳಿಯ ಮಂಜುನಾಥ, ಕೊಪ್ಪಳದ ವಿಸ್ತಾರ್ ರಂಗಶಾಲೆಯಿಂದ ಡಿಪ್ಲೊಮೊ ಪದವಿ ಪಡೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ನಟನೆ, ಬೆಳಕಿನ ವಿನ್ಯಾಸ ಮತ್ತು ತಾಂತ್ರಿಕ ಕೆಸದಲ್ಲಿ ತೊಡಗಿಕೊಂಡಿದ್ದಾರೆ.