ಇಡಿಯ ಜಗತ್ತು ಯುದ್ದೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿ ಮ್ಯಾಕ್ಬೆತ್ಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ. ಮನುಷ್ಯರನ್ನೇ ವಿಭಜಿಸುವ, ಮನುಷ್ಯತ್ವವನ್ನೇ ಅಣಕಿಸುವ, ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೆ ನಮಗೆ ಬಿಡುಗಡೆಯಿಲ್ಲ. ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ ಈ ನೆಲದ ತುಂಬ. ಅವುಗಳಿಂದ ಯುದ್ಧ ಹಾಗು ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸಿದ್ದೇವೆ ಮತ್ತು ಅದು ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ. ನಮ್ಮಿಂದ ಎಣಿಸಲಾದಷ್ಟು ಗಾಯದ ಕಥೆಗಳಿವೆ ಇಲ್ಲಿ. ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ ಸಂತಾಪಗಳಿವೆ.
ರಂಗಭೂಮಿಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಲೆತ್ನಿಸುತ್ತಿರುವ ರಂಗವಿದ್ಯಾರ್ಥಿಗಳ ಕಲಿಕಾ ಪಠ್ಯವಾಗಿಯೂ ಇದನ್ನು ಪ್ರಯೋಗಿಸಲಾಗಿದೆ.
ನಮ್ಮ ಸುತ್ತಣ ಕರ್ಕಶ ದನಿಯನ್ನು ಕಾವ್ಯವು ಮೃದುವಾಗಿಸಬಲ್ಲದು: ಕಾವ್ಯದ ಲಯ. ಸಂಗೀತ, ಪ್ರತಿಮೆಗಳು ಆರ್ದ್ರ ಹಾಗೂ ಚಿಂತನಾಶೀಲ ನಡೆಗೆ ನೆರವು ನೀಡಬಲ್ಲದು ಎಂಬ ಆಶಯದಿಂದ ಕಾವ್ಯ ರಂಗ ರೂಪುಗೊಂಡಿದೆ. ನಿರ್ದಿಗಂತ ರಂಗ ಪಯಣದ ಕಲಾವಿದರು ಇಲ್ಲಿ ಯುದ್ಧ, ಕೋಮು ದ್ವೇಷದ ಕುರಿತು ಎಚ್ಚರವನ್ನು ಮೂಡಿಸಬಲ್ಲ ಕೆಲವು ಕವನ, ಕಥೆಗಳನ್ನು ರಂಗಮುಖೇನ ಹೇಳಿದ್ದಾರೆ. ಕನ್ನಡದ ಹಾಗೂ ಕನ್ನಡಕ್ಕೆ ಅನುವಾದಗೊಂಡ ಹಲವು ಪಠ್ಯಗಳಿವೆ ಇಲ್ಲಿ. ಭಾಷೆಯ ಭಾವವನ್ನು ಅಭಿನಯಿಸುವ ಇಲ್ಲಿನ ಕಲಾವಿದರು ರಂಗ ಹಾಗು ಭಾಷೆಯ ಪರಿಕರಗಳನ್ನು ಪಾಕಗೊಳಿಸಲು ಯತ್ನಿಸಿದ್ದಾರೆ. ನಮ್ಮ ನಡುವಿನ ತಲ್ಲಣಗಳನ್ನು ಇವರು ಕಾವ್ಯ ಚಿತ್ರಗಳ ಮೂಲಕ ಯುವಮನಸ್ಸುಗಳೊಂದಿಗೆ ಮಾತನಾಡಿದ್ದಾರೆ.
ಇವರಿಗೆ ನಾವು ಕೃತಜ್ಞರು
ಕುವೆಂಪು, ಬರ್ಟೋಲ್ಟ್ ಬ್ರೆಕ್ಟ್, ಪಾಬ್ಲೋ ನೆರುಡ, ಪಿರಾಂಡಲೋ, ಒಕಟ ಬಿಟೆಕ್, ಸರಸುಮ್ ಸಮಿವಾಲ, ಗಂಗಾಧರ ಚಿತ್ತಾಲ, ವಿಜಯ ದಬ್ಬೆ, ಸವಿತಾ ನಾಗಭೂಷಣ, ಎಚ್.ಎಸ್ ವೆಂಕಟೇಶಮೂರ್ತಿ, ಎಚ್ ಎಸ್ ಅನುಪಮ, ಸುಧಾ ಆಡುಕಳ, ವಿಕ್ರಮ ವಿಸಾಜಿ, ಕ್ವಾಸಿರ್ ಹಸನ್, ಗರಿಮಾ ಶ್ರೀವಾಸ್ತವ.
ಆಡಿದವರಾ ಮನವಾ ಬಲ್ಲೆ
೧೬ ನೇ ಶತಮಾನದಲ್ಲಿ ದಂಗೆ ಎದ್ದ ಸಂತನ ಕತೆ ಇದು. ಕಾವಿ ಕಲ್ಯಾಣದಿಂದ ಕಾಯಕದ ಕಲ್ಯಾಣದ ಕಡೆಗೆ ನಡೆವ ಹಂಬಲದ, ಕತ್ತಲರಾಜ್ಯದ ಸಮುದಾಯಗಳ ಜಾಗೃತಿಗಾಗಿ ಕೈಗೊಂಡ ಪಯಣದ ಕತೆ ಇದು.
ಯಾವ ವ್ಯವಸ್ಥೆಯ ವಿರುದ್ಧ ಬಸವಣ್ಣ ಮತ್ತವರ ಸಂಗಾತಿಗಳು ಹೋರಾಡಿದರೋ ಅದೇ ಸ್ಥಾವರ ರೂಪ ಮತ್ತೆ ರೂಢಿಗೆ ಬಂದ ವಿಪರ್ಯಾಸವನ್ನು ಮಂಟೇಸ್ವಾಮಿ ಕಾವ್ಯ ಎದುರುಗೊಳ್ಳುವುದು. ಅರಮನೆ, ಗುರುಮನೆಗಳ ನಡುವೆ ಸಿಲುಕಿಕೊಂಡು ಬಣ್ಣಗೆಡುತ್ತಿದ್ದ ಧಾರ್ಮಿಕತೆಯನ್ನು ತಿಪ್ಪೆಯಮೇಲೆ ತಂದಿರಿಸುವುದರ ಮೂಲಕ ಮತ್ತೆ ಜಂಗಮ ಸ್ಥಿತಿಗೆ ಅದನ್ನು ಒಯ್ಯುವ ಪ್ರಯತ್ನವನ್ನು ಈ ಕಾವ್ಯ ಮಾಡುತ್ತದೆ.
೧೬ ನೇ ಶತಮಾನದ ಮಂಟೇಸ್ವಾಮಿಯನ್ನು ೧೨ ನೇ ಶತಮಾನದ ಬಸವ, ಅಲ್ಲಮ, ಮಡಿವಾಳ ಮಾಚಯ್ಯ, ಹರಳಯ್ಯ ಮುಂತಾದವರ ಜತೆ ಸಮೀಕರಿಸಿ, ಮುಖಾಮುಖಿಯಾಗಿಸಿ ರೂಪಕವಾಗಿಸುತ್ತದೆ ಇದು. ಐತಿಹಾಸಿಕ ಸಂಗತಿಯು, ಪುರಾಣದ ಸಂಗತಿಯೊAದಿಗೆ ಸಂಲಗ್ನವಾಗಿ ಕಾಲಾತೀತವಾಗಿ ಸಂಭಾಷಿಸುವುದು ಈ ಜನಪದ ಕಾವ್ಯದ ವಿಶೇಷ.
ಭಾರತೀಯ ಸಂಸ್ಕೃತಿಯ ಆತ್ಮವಾಗಿರುವ ಬಹುತ್ವ ಮತ್ತು ವೈವಿಧ್ಯತೆಯ ಲಾಂಛನರೂಪವಾಗಿ ಈ ಕಾವ್ಯವಿದೆ. ಸೂಫಿ ಹಾಗೂ ಶೈವ ಸಂಸ್ಕೃತಿಯ ಮಿಲನದ ರೂಪಗಳೂ ಇಲ್ಲಿವೆ. ನೀಲಗಾರರು ಎಂಬ ಜನಪದ ಕಥನಗಾರರ ಮೂಲಕ ಆಚರಣೆಯ ರೂಪದಲ್ಲಿ ಹಾಡಲ್ಪಡುತ್ತಿದ್ದ ಈ ಮಹಾಕಾವ್ಯದಲ್ಲಿಯ ‘ಕಲ್ಯಾಣ ಪಟ್ಟಣದ ಸಾಲು’ ಕಾವ್ಯಭಾಗವನ್ನು ಆಧುನಿಕ ಸಂಗೀತ ವಿನ್ಯಾಸಗಳೊಂದಿಗೆ ಪ್ರಸ್ತುತಪಡಿಸಲಾಗಿದೆ.
ವರ್ಣ, ವರ್ಗ, ಲಿಂಗಮೊದಲಾದ ಕ್ಷೇತ್ರಗಳಲ್ಲಿಯ ಅಸಮಾನತೆ, ಶೋಷಣೆ, ಅವಮಾನಗಳ ವಿರುದ್ಧದ ಪ್ರತಿಭಟನೆಯಾಗಿ, ಸಾಮಾಜದಲ್ಲಿಯ ಸಮತೆ ಮತ್ತು ಶಾಂತಿಯ ಹಂಬಲವಾಗಿ ರೂಪುಗೊಂಡ ಹಾಡುಗಳಿವು. ಜೀವಜಾಲವನ್ನೂ, ಮೈತ್ರಿಯನ್ನೂ ಕೆಡವಲೆತ್ನಿಸುತ್ತಿರುವ ಶಕ್ತಿಗಳವಿರುದ್ಧ ಎತ್ತುವ ಸೊಲ್ಲುಗಳು ಇವು. ಕಲೆಯು ನಮ್ಮನ್ನು ಸದಾ ಎಚ್ಚರದಲ್ಲಿಡಬೇಕು; ನಮ್ಮನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸಲು ನೆರವು ನೀಡಬೇಕು ಎಂಬ ನಂಬಿಕೆ ಈ ಪ್ರತಿಭಟನೆಯ ಹಾಡುಗಳ ಹಿನ್ನೆಲೆಯಲ್ಲಿದೆ.
ಕವನವೊಂದರ ಸಂಗೀತ ವಾಚನವಿದು. ಸಂಗೀತ ಮತ್ತು ವಾಚಿಕಾಭಿನಯ ಇವೆರಡರ ಸಾಧ್ಯತೆಗಳನ್ನೂ ಬೆರೆಸಿ ಸೃಷ್ಟಿಸಿದ ರೂಪಕವಿದು. ಚಂದ್ರಶೇಖರ ಕಂಬಾರರ ಹಾಡುವ ಮರ ಕವನವನ್ನು ಇಟ್ಟುಕೊಂಡು ಈ ಸಂಗೀತವಾಚನವನ್ನು ಸಿದ್ಧಪಡಿಸಲಾಗಿದೆ.