ಸಮಕಾಲೀನ ಸಾಂಸ್ಕೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳುವ ಹಂಬಲದಿಂದ ಹುಟ್ಟಿಕೊಂಡಿದ್ದು ನಿರ್ದಿಗಂತ. ಬಹುಮುಖಿ ಪ್ರಜ್ಙೆಯ ಸಮಾನ ಮನಸ್ಕರು ತೊಡಗಿಕೊಂಡಿರುವ ಈ ಸಂಘಟನೆಯು ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ ರೂಪಕವಾಗಿ ಬರುವ ‘ನಿರ್ದಿಗಂತ’ ಎಂಬ ಕಲ್ಪನೆಯನ್ನು ತನ್ನ ಕಾರ್ಯ ವಿಧಾನವಾಗಿಸಿಕೊಂಡಿದೆ. ರಂಗಭೂಮಿಯ ಪ್ರಧಾನ ನೆಲೆಯಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ಶಿಲ್ಪವೇ ಮೊದಲಾದ ಲಲಿತ ಕಲೆಗಳನ್ನು ಒಳಗೊಂಡು ಕಾಲದ ಕರೆಗೆ ಕಂಪಿನ ಕರೆಯನ್ನು ಜೋಡಿಸುವ ಪ್ರಯತ್ನದಲ್ಲಿದೆ. ಇಲ್ಲಿ ಕಲಾವಿದರು, ಸಾಹಿತಿಗಳು, ವಿಜ್ಞಾನಿಗಳು, ಪರಿಸರ ತಜ್ಙರು ಪರಸ್ಪರ ಸಾವಯವ ಸಂಬಂಧಿಗಳಾಗಿ ಇರುತ್ತಾರೆ.
ಈ ಬದುಕು ಆರಂಭವಾಗಿ ಒಂದು ವರ್ಷವಾಯಿತು. ರಂಗಭೂಮಿಯ ಕಲಾವಿದರಿಗೆ ಕಾವುಗೂಡಾಗಿ ಮೈದಳೆಯುತ್ತ ಹಲವು ಪ್ರಯೋಗಗಳನ್ನು ನಡೆಸುತ್ತ ಸಮಾಜದೊಳಗೆ ಸೂಕ್ತ ಮಧ್ಯಪ್ರವೇಶಿಕೆ ಪಡೆಯುತ್ತ ನಿರ್ದಿಗಂತವು ಸಾಗುತ್ತಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನ ತಲುಪುವ ಉದ್ದೇಶದ ಕಾಲೇಜುರಂಗ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಠಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿ ‘ಶಾಲಾರಂಗ’ ಹಾಗು ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗಶಿಕ್ಷಕರನ್ನು ತೊಡಗಿಸಿರುವ ‘ಶಾಲಾ ರಂಗವಿಕಾಸ’, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ‘ರಂಗವಿಕಾಸ’ ಯೋಜನೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ.
ನಿರ್ದಿಗಂತವು ಮೈಸೂರಿಗೆ ಸಮೀಪದಲ್ಲಿರುವ ಶ್ರೀರಂಗಪಟ್ಟಣ ಬಳಿಯ ಲೋಕಪಾವನಿ ನದಿಯ ಪ್ರಶಾಂತ ದಡದಲ್ಲಿ ನೆಲೆಸಿದೆ.