ಇಲ್ಲಿ ನಮ್ಮ ಶಾಲಾರಂಗದ ಕಲಾವಿದರು ಮಕ್ಕಳ ಮುಂದೆ ಹಾಗೂ ಮಕ್ಕಳ ಜತೆ ಹಾಡುಹೇಳುತ್ತಾರೆ, ಕತೆ ಹೇಳುತ್ತಾರೆ, ಚಿತ್ರ ಬಿಡಿಸುತ್ತಾರೆ, ಆಟವಾಡುತ್ತಾರೆ, ಬೊಂಬೆಗಳ ಮೂಲಕ ಕತೆ ತೋರಿಸುತ್ತಾರೆ. ತಾವೇ ಕತೆಗಳನ್ನು ಅಭಿನಯಿಸುತ್ತಾರೆ. ಇವೆಲ್ಲದರ ಮೂಲಕ ವರ್ತಮಾನದ ಅನೇಕ ಸಂಗತಿಗಳನ್ನು ಮಕ್ಕಳಿಗೆ ಮುಟ್ಟಿಸುತ್ತಾರೆ. ಆದರೆ ಅವು ಕೇವಲ ಮಾಹಿತಿಗಳಾಗದೇ ಅನುಭವವಾಗುವಂತೆ ನೋಡಿಕೊಳ್ಳುತ್ತಾರೆ. ಪಠ್ಯ ಸಂವಹನೆಯಲ್ಲಿ ಅಗತ್ಯವಾದ ಹಾವ-ಭಾವ, ಕಲ್ಪನೆ ಮುಂತಾದವುಗಳ ಪರಿಣಾಮಕಾರಿ ಬಳಕೆಯ ಸಾಧ್ಯತೆಯನ್ನು ಶೋಧಿಸುವುದು ಹೇಗೆ ಎಂಬುದರ ಹಾದಿ ಕಾಣಿಸುತ್ತಾರೆ.
ನಿರ್ದಿಗಂತದ ಮಹತ್ವದ ಯೋಜನೆಯಿದು. ರಂಗಭೂಮಿ ಮತ್ತು ಮಕ್ಕಳ ರಂಗಭೂಮಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿರುವ ೧೦ ಕಲಾವಿದರು ಒಂದು ವರ್ಷಗಳ ಕಾಲ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಮತ್ತು ರಂಗಭೂಮಿಯ ಸಂಬಂಧದ ಪರಿಣಾಮಕಾರಿ ಅಧ್ಯಯನನಡೆಸಲು ಈ ಕಲಾವಿದರು ರಾಜ್ಯದ ೨೦೦ ಶಾಲೆಗಳಲ್ಲಿ ಶಾಲಾರಂಗ ಪ್ರಯೋಗ ಮಾಡುತ್ತಿದ್ದಾರೆ.
ಶಾಲೆಯ ದೈನಂದಿನ ಚಟುವಟಿಕೆಗಳೊಂದಿಗೆ ರಂಗಭೂಮಿಯೂ ಬೆರೆತರೆ?
ಶಿಕ್ಷಣದಲ್ಲಿ ರಂಗಭೂಮಿಯ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಇದು ಇನ್ನೊಂದು ಹೆಜ್ಜೆ. ಈಗಾಗಲೇ ರಂಗಭೂಮಿಯಲ್ಲಿ, ಮಕ್ಕಳ ಶಿಬಿರಗಳಲ್ಲಿ ಕೆಲಸ ಮಾಡಿ ಅನುಭವ ಉಳ್ಳ ಐದು ಕಲಾವಿದರನ್ನು ಆಯ್ದುಕೊಂಡು ಅವರಿಗೆ ೧೫ ದಿನಗಳ ಸನಿವಾಸ ತರಬೇತಿ ನೀಡಿ ರಾಜ್ಯದ ಐದು ಶಾಲೆಗಳಿಗೆ ಅವರನ್ನು ರಂಗಶಿಕ್ಷಕರನ್ನಾಗಿ ೬ ತಿಂಗಳ ಕಾಲ ನಿಯೋಜನೆ ಮಾಡಲಾಗಿದೆ. ಅವರು ಅಲ್ಲಿ ಮಕ್ಕಳೊಡನೆ ನಾಟಕ, ಆಟ, ಸಂಗೀತ, ಚಿತ್ರ ಮೊದಲಾದ ಚಟುವಟಿಕೆಗಳನ್ನು ನಡೆಸಲಿದ್ದಾರೆ. ದಸರಾ ಶಿಬಿರ ಸಂಘಟಿಸಲಿದ್ದಾರೆ. ನಿರ್ದಿಗಂತದಲ್ಲಿ ಈ ರಂಗಶಿಕ್ಷಕರಿಗಾಗಿ ನೀಡಿದ ತರಬೇತಿಯ ಪುಟ್ಟ ನೋಟಗಳಿವು
ಇಂದಿನ ಯುವ ನಿರ್ದೇಶಕರು ಈ ಜಗತ್ತನ್ನ ಹೇಗೆ ಗ್ರಹಿಸುತ್ತಿದ್ದಾರೆ ಅವರ ಲೋಕ ಗ್ರಹಿಕೆಯ ಅಭಿವ್ಯಕ್ತಿಯ ಕ್ರಮಗಳೇನು ಎಂಬುದನ್ನು ಅರಿಯುವ ಮತ್ತು ಅವರ ಕನಸುಗಳಿಗೆ ಬೆಂಬಲ ನೀಡುವ ಯೋಜನೆ ಇದು. ಆಶಯ ಮತ್ತು ಆಕೃತಿಯಲ್ಲಿ ತುಂಬಾ ಭಿನ್ನವಾಗಿ ಯೋಚಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಐದು ಜನ ಯುವ ನಿರ್ದೇಶಕರನ್ನ ನಿರ್ದಿಗಂತವು ಗುರುತಿಸಿ ಅವರಿಗೆ ಫೆಲೋಶಿಪ್ ನೀಡಿತು. ಅವರು ಕಟ್ಟಿದ ಹೊಸ ನಾಟಕಗಳನ್ನು ರಾಜ್ಯದ ಎರಡು ಕಡೆಯಲ್ಲಿ ನಡೆದ ನಿರ್ದಿಗಂತ ರಂಗೋತ್ಸವಗಳಲ್ಲಿ ಪ್ರಯೋಗಿಸಲಾಯಿತು.